About
ಕನ್ನಡ ವಿಭಾಗವು ಪ್ರಾರಂಭದಿಂದಲೂ ಕ್ರಿಯಾಶೀಲವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಲ್ಲದೆ ಸಾಂಸ್ಕೃತಿಕ ಮತ್ತು ಸಮಾಜಮುಖಿಯಾಗಿ ವಿದ್ಯಾರ್ಥಿಗಳನ್ನು ಬೆಳೆಸಲು ಬಹುಮುಖಿಯಾಗಿ ಶ್ರಮಿಸುತ್ತಾ ಬಂದಿದೆ. ಪ್ರಸ್ತುತವಾಗಿ ಕನ್ನಡವನ್ನು ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಒಂದು ಭಾಷೆಯಾಗಿ ಅಭ್ಯಸಿಸುತ್ತಾರೆ.
ಕನ್ನಡ ವಿಭಾಗವು ಪ್ರಸ್ತುತವಾಗಿ ವಿದ್ಯಾರ್ಥಿಗಳಲ್ಲಿ ಹಲವು ಕೌಶಲ್ಯಗಳನ್ನು ಬೆಳೆಸಲು ಕವನ , ಲೇಖನಗಳನ್ನು ವಿದ್ಯಾರ್ಥಿಗಳಿಂದ ಬರೆಯಲು ಪ್ರೋತ್ಸಾಹಿಸಿ ಈಗಾಗಲೇ ವಿದ್ಯಾರ್ಥಿ ರಚಿತ ಕವನಸಂಕಲನ, ಹಾಗೂ ವಿಮರ್ಶಾಲೇಖನಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಪಡಿಸಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಮ್ಮ ಜ್ಞಾನ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಈ ಮೂಲಕ ಪ್ರಯತ್ನಿಸುತ್ತಿದೆ . ಅಲ್ಲದೆ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸಿ ಅಭಿನಯ ಕಲೆಗಳನ್ನು ಬೆಳೆಸಲು 'ಜನಮನರಂಗವೇದಿಕೆ' ಎಂಬ ರಂಗವೇದಿಕೆಯ ಮೂಲಕ ನಾಟಕಾಭಿನಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯನ್ನು ಸಾರಲು ' ಕನ್ನಡ ಸಂಘವಿದ್ದು ಸಂಚಲನ,ಜನಪದ ಜಾತ್ರೆ , ಐಸಿರಿ ,ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು , ಅಂತರ ತರಗತಿ ಮತ್ತು ಅಂತರ ಕಾಲೇಜು ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಕೌಶಲ್ಯಗಳನ್ನು ಬೆಳೆಸಲು ಪ್ರಯತ್ನಿಸುತ್ತಿದೆ .
ಕನ್ನಡ ವಿಭಾಗವು ಪ್ರತಿ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ , ಜನಪದ ಹಾಡು , ಸಿನಿಮಾ ಹಾಡು, ಭರತನಾಟ್ಯ , ನೃತ್ಯ , ವೀರಗಾಸೆ ,ಜಾನಪದ ಕಲೆಗಳಾದ ಡೊಳ್ಳುಕುಣಿತ ,ಪೂಜಾಕುಣಿತ , ಜನಪದ ನೃತ್ಯ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವುದರ ಮೂಲಕ ನಾಡು ನುಡಿ ಸಂಬಂಧಿಸಿದ ಜ್ಞಾನವನ್ನು ಬೆಳೆಸುವುದರಲ್ಲಿ ಮುಂಚೂಣಿಯಲ್ಲಿದೆ .